ಭಾರತದಲ್ಲಿ ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳು ಬ್ಯಾಕ್ಟೀರಿಯಾ, ಪರಾವಲಂಬಿ, ವೈರಸ್ ಮತ್ತು ಶಿಲೀಂಧ್ರಗಳ ಸೋಂಕಿನ ಬರುವ ಕಾಯಿಲೆಗಳಾಗಿದ್ದು ಅವು ಕಡಿಮೆ ಆದಾಯದ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಅವುಗಳನ್ನು ಪರಿಹರಿಸಲು ಕಡಿಮೆ ಧನಸಹಾಯ ಮಾಡಲಾಗುತ್ತಿದೆ. ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳು ಭಾರತದಲ್ಲಿ ಸಾಮಾನ್ಯವಾಗಿದೆ. ೨೦೧೮ರಲ್ಲಿ ಭಾರತದ ಜನಸಂಖ್ಯೆಯು ಸುಮಾರು ೧೩೦ ಕೋಟಿ ಆಗಿದ್ದು, ಇದು ವಿಶ್ವದ ಎರಡನೇ ಅತಿ ದೊಡ್ಡ ಜನಸಂಖ್ಯೆಯಾಗಿದೆ. ಆದರೂ, ಇತರ ದೇಶಗಳಿಗಿಂತ ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳಿಗೆ ಅದು ಕಾರಣೀಭೂತವಾಗಿಲ್ಲ. ಭಾರತದಲ್ಲಿ ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಬಡತನದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಭಾರತದಲ್ಲಿ ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳಲ್ಲಿ ಆಸ್ಕರಿಯಾಸಿಸ್, ಕೊಕ್ಕೆಹುಳದ ಸೋಂಕು, ಟ್ರೈಚುರಿಯಾಸಿಸ್, ಡೆಂಗ್ಯೂ ಜ್ವರ, ದುಗ್ಧರಸ ಫೈಲೇರಿಯಾಸಿಸ್, ಟ್ರಾಕೋಮಾ, ಸಿಸ್ಟಿಸರ್ಕೊಸಿಸ್, ಕುಷ್ಠರೋಗ, ಎಕಿನೊಕೊಕೊಸಿಸ್, ಒಳಾಂಗಗಳ ಲೀಶ್ಮೇನಿಯಾಸಿಸ್ ಮತ್ತು ರೇಬೀಸ್ ಸೇರಿವೆ . == ಪಟ್ಟಿ == "ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳು" ಒಂದು ಸಾಮಾಜಿಕ ಪರಿಕಲ್ಪನೆಯಾಗಿದೆ. ವಿವಿಧ ಸಂಸ್ಥೆಗಳು ಕೆಲವೊಮ್ಮೆ ವಿಭಿನ್ನ ಕಾಯಿಲೆಗಳನ್ನು ಈ ಪಟ್ಟಿಗೆ ಸೇರಿಸುತ್ತವೆ. ಈ ಕಾಯಿಲೆಗಳು ಉಷ್ಣವಲಯದ ವಾತಾವರಣದಲ್ಲಿ ಸಂಭವಿಸುತ್ತವೆಯಾದುದರಿಂದ ಅವು ಬಹುತೇಕ ಒಂದೇ ನಮೂನೆಯವಾಗಿರುತ್ತವೆ ಹಾಗೂ ಅನೇಕರಿಗೆ ಹಾನಿ ಮಾಡುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಇಂತಹ ೨೦ ಕಾಯಿಲೆಗಳನ್ನು ಗುರುತಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪಟ್ಟಿಯಲ್ಲಿರುವ ಆ ೨೦ ಕಾಯಿಲೆಗಳಲ್ಲಿ ೧೨ ಭಾರತದಲ್ಲಿವೆ. ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳ ನಿಯತಕಾಲಿಕೆ ತನ್ನದೇ ಆದ ಪಟ್ಟಿಯನ್ನು ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪಟ್ಟಿಯಲ್ಲಿರುವ ಕಾಯಿಲೆಗಳು ಚಾಗಸ್ ಕಾಯಿಲೆ, ಮಾನವ ಆಫ್ರಿಕನ್ ಟ್ರಿಪನೋಸೋಮಿಯಾಸಿಸ್ (ನಿದ್ರಿಸುವ ಕಾಯಿಲೆ), ಆಹಾರದಿಂದ ಹರಡುವ ಟ್ರೆಮಾಟೋಡಿಯಾಸಸ್, ಒಂಕೊಸೆರ್ಸಿಯಾಸಿಸ್ (ನದಿ ಕುರುಡುತನ), ಸ್ಕಿಸ್ಟೊಸೋಮಿಯಾಸಿಸ್, ಚಿಕುನ್‌ಗುನ್ಯಾ, ಬುರುಲಿ ಹುಣ್ಣು, ಮತ್ತು ಯಾವ್ಸ್ (ಸ್ಥಳೀಯ ಟ್ರೆಪೊನೆಮಾಟೋಸಸ್). == ಪ್ರೊಟೊಜೋವನ್ == === ಒಳಾಂಗಗಳ ಲೆಷ್ಮಾನಿಯಾಸಿಸ್ (ಕಾಲಾ-ಅಜ಼ರ್) === ಭಾರತವು ಲೆಷ್ಮಾನಿಯಾಸಿಸ್ (ಕಾಲಾ-ಅಜ಼ರ್) ನಿರ್ಮೂಲನೆಗಾಗಿ ಒಂದು ಗುರಿ ಇಟ್ಟಿದೆ. ಕಾಯಿಲೆಯನ್ನು ನಿರ್ನಾಮಮಾಡುವ ಹಂತಗಳಲ್ಲಿ ನಿಷ್ಕ್ರಿಯ ಮತ್ತು ಸಕ್ರಿಯ ಕಾಯಿಲೆ ಪತ್ತೆ, ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆ, ಮತ್ತು ನಿಯಂತ್ರಣ -ಇವುಗಳು ಸೇರಿವೆ ೨೦೦೦ ನೇ ಇಸವಿಗಿಂತ ಮೊದಲು ಭಾರತವು ಕಾಲಾ-ಅಜ಼ರ್ ಅನ್ನು ದೇಶದಿಂದ ಸಂಪೂರ್ಣವಾಗಿ ತೊಡೆದುಹಾಕಬಲ್ಲದು ಎಂಬ ಭರವಸೆ ಮತ್ತು ನಿರೀಕ್ಷೆ ಇತ್ತು. ಆ ವರ್ಷಗಳಲ್ಲಿ ಸಾಮಾನ್ಯ ಚಿಕಿತ್ಸೆಯನ್ನು ಮುಂದುವರಿಸಲು ಮತ್ತು ಹೊಸ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ವಿವಿಧ ಕಾರ್ಯಕ್ರಮಗಳು ಇದ್ದವು. ೨೦೦೦ ದ ಆಸುಪಾಸಿನಲ್ಲಿ, ಕಾಲಾ-ಅಜ಼ರ್‌ಗೆ ಕಾರಣವಾಗುವ ಪರಾವಲಂಬಿಗಳು ಪೆಂಟಾವಲೆಂಟ್ ಆಂಟಿಮೋನಿಯಲ್‌ ಎಂಬ ಔಷಧಕ್ಕೆ ನಿರೋಧಕತೆಯನ್ನು ಬೆಳೆಸಿಕೊಂಡಿಸಿವೆ ಎಂಬ ವರದಿಗಳು ಬಂದವು. ಇದು ಕಳೆದ 50 ವರ್ಷಗಳಿಂದ ಈ ಕಾಯಿಲೆಗೆ ಚಿಕಿತ್ಸೆ ನೀಡುವ ಜನಪ್ರಿಯ ಔಷಧವಾಗಿತ್ತು. ಕಾಯಿಲೆಯು ಮತ್ತೆ ಹರಡತೊಡಗಿತು ಮತ್ತು ಈಗ ಚಿಕಿತ್ಸೆ ನೀಡಲು ಹೆಚ್ಚು ಕಷ್ಟಕರವಾಗಿದೆ. ಭಾರತದ ಬಡ ಪ್ರದೇಶಗಳಲ್ಲಿ ಕಾಯಿಲೆಯನ್ನು ಸರಿಯಾಗಿ ವರದಿ ಮಾಡದಿರುವುದು ಕೂಡ ಒಂದು ಸಮಸ್ಯೆಯಾಗಿದ್ದು, ಕಾಯಿಲೆ ಹರಡಲು ಅವಕಾಶ ಮಾಡಿಕೊಟ್ಟಿತು. ಆ ಕಾಲದಲ್ಲಿ ಕೆಲವು ನವೀನ ಚಿಕಿತ್ಸೆಗಳು ದುಬಾರಿಯಾಗಿದ್ದವು. ಸುಮಾರು ೨೦೦೦ ನೇ ವರ್ಷದಿಂದ ಭಾರತದಲ್ಲಿ ಕಾಲಾ-ಅಜ಼ರ್ ಚಿಕಿತ್ಸೆ ಕಷ್ಟಕರವಾಗಿದೆ. ೨೦೧೭ ರಲ್ಲಿ ಭಾರತ ಸರ್ಕಾರವು ಕಾಲಾ-ಅಜ಼ರ್ ಅನ್ನು ದೇಶದಿಂದ ಸಂಪೂರ್ಣವಾಗಿ ತೊಡೆದುಹಾಕಲು ಕೆಲವು ಪ್ರದೇಶಗಳಿಗೆ ಸೀಮಿತಗೊಳಿಸಿ ವೈದ್ಯಕೀಯ ಚಿಕಿತ್ಸೆಗೆ ಅನುವು ಮಾಡಿಕೊಟ್ಟಿತ್ತು. ೨೦೨೦ ರ ಹೊತ್ತಿಗೆ ಕಾಯಿಲೆಯು ಅಪೂರ್ವವಾಗಿರಬೇಕು ಮತ್ತು ಮತ್ತೆ ಎಂದಿಗೂ ಹರಡಬಾರದು ಅಥವಾ ಬೆಳೆಯಬಾರದು ಎಂಬುದು ಇದರ ಉದ್ದೇಶವಾಗಿತ್ತು. ರೋಗಿಯು ಗುಣಮುಖನಾದಂತೆ ಕಾಣುವ ಮೊದಲು ಮತ್ತು ನಂತರ ಕಾಲಾ-ಅಜ಼ರ್ ಚಿಕಿತ್ಸೆಗಾಗಿ ವೈದ್ಯರು ಒಂದು ಔಷಧಿಯನ್ನು ಸುರಕ್ಷಿತ ಪ್ರಮಾಣದಲ್ಲಿ ಬಳಸುತ್ತಾರೆ. ಕಾಲಾ-ಅಜ಼ರ್ ಅನ್ನು ಕಡಿಮೆ ಮಾಡಲು ಭಾರತದಲ್ಲಿ ಆರೋಗ್ಯ ಸಂಸ್ಥೆಗಳು ಮಾಡಿದ ಕಾರ್ಯಗಳು ಸಾಂಕ್ರಾಮಿಕ ರೋಗಗಳನ್ನು ತೊಡೆದುಹಾಕಲು ಭಾರತ ಅಥವಾ ಇತರ ಯಾವುದೇ ದೇಶಗಳಿಗೆ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಿಗೆ ಅನ್ವಯಿಸಲು ಉತ್ತಮ ಮಾದರಿಯಾಗಿದೆ ಎನ್ನಬಹುದು. === ಆಫ್ರಿಕನ್ ಟ್ರಿಪನೋಸೋಮಿಯಾಸಿಸ್ === ಆಫ್ರಿಕನ್ ಟ್ರಿಪನೊಸೋಮಿಯಾಸಿಸ್ (ನಿದ್ರಿಸುವ ಕಾಯಿಲೆ) ಭಾರತದಲ್ಲಿ ದೊಡ್ಡ ಸಮಸ್ಯೆಯಲ್ಲ. ಟ್ರಿಪನೊಸೊಮಾ ಇವಾನ್ಸಿ ಎಂಬ ಹೆಸರಿನ ಪರಾವಲಂಬಿಯ ಸಂಪರ್ಕದಿಂದ ೨೦೦೫ರಲ್ಲಿ ಓರ್ವ ಭಾರತೀಯ ರೈತ ಅನಾರೋಗ್ಯಕ್ಕೆ ಒಳಗಾದ . === ಚಾಗಸ್ ಕಾಯಿಲೆ === ಚಾಗಸ್ ಕಾಯಿಲೆಯು ಭಾರತದಲ್ಲಿ ಸಮಸ್ಯೆಯಲ್ಲ. ಆಫ್ರಿಕಾದ ಟ್ರಿಪನೊಸೋಮಿಯಾಸಿಸ್ನಂತೆ ಚಾಗಸ್ ಕಾಯಿಲೆಯು ಟ್ರಿಪನೊಸೊಮಾ ಎಂಬ ಪರಾವಲಂಬಿಯಿಂದಾಗಿ ಬರುತ್ತದೆ ಈ ಪರಾವಲಂಬಿಯು ಭಾರತದಲ್ಲಿಲ್ಲ. == ಹುಳುಗಳು == === ಮಣ್ಣಿನ ಮೂಲಕ ಹರಡುವ ಹೆಲ್ಮಿಂಥಿಯಾಸಿಸ್ === ಮಣ್ಣಿನ ಮೂಲಕ ಹರಡುವ ಹೆಲ್ಮಿಂಥಿಯಾಸಿಸ್ ಎನ್ನುವುದು ವಿವಿಧ ಪರಾವಲಂಬಿ ಕಾಯಿಲೆಗಳ ಒಂದು ಗುಂಪಾಗಿದ್ದು, ಇದನ್ನು ವಿವಿಧ ದುಂಡುಹುಳುಗಳು ಉಂಟುಮಾಡುತ್ತವೆ. ದೊಡ್ಡ ದುಂಡುಹಳುಗಳು ಅಸ್ಕರಿಯಾಸಿಸ್ಗೆ ಕಾರಣವಾಗುತ್ತವೆ. ಕೊಕ್ಕೆಹುಳುಗಳು ಕೊಕ್ಕೆಹುಳು ಸೋಂಕಿಗೆ ಕಾರಣವಾಗುತ್ತವೆ. ಈ ಹುಳುಗಳು ಒಂದಕ್ಕೊಂದು ಸಂಬಂಧಿಸಿವೆ ಮತ್ತು ಅವುಗಳನ್ನು ತಡೆಗಟ್ಟುವ ಉಪಾಯಗಳು ಅವರೆಲ್ವಕ್ಕೂ ಅನ್ವಯಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ೨೦೧೫ ರಲ್ಲಿ ಮಾಡಿದ ಅಂದಾಜಿನ ಪ್ರಕಾರ, ಭಾರತದಲ್ಲಿ ಮಣ್ಣಿನ ಮೂಲಕ ಹರಡುವ ಹೆಲ್ಮಿಂಥಿಯಾಸಿಸ್ ಕಾಯಿಲೆ ಹೊಂದಿದ್ದ ಶೇಕಡ ೭೫ ರಷ್ಟು ಮಕ್ಕಳು ಸಹ ಚಿಕಿತ್ಸೆ ಪಡೆದು ಗುಣಮುಖರಾದರು. === ದುಗ್ಧರಸ ಆನೆಕಾಲು (ಫೈಲೇರಿಯಾಸಿಸ್) === ವಿಶ್ವದ ದುಗ್ಧರಸ ಫೈಲೇರಿಯಾಸಿಸ್ ಪ್ರಕರಣಗಳಲ್ಲಿ ಶೇಕಡ ೪೦ರಷ್ಟು ಭಾರತದಲ್ಲಿದೆ. ಈ ಕಾಯಿಲೆಯ ಚಿಕಿತ್ಸೆಯ ಒಂದು ಪ್ರಮುಖ ತೊಂದರೆಯೆಂದರೆ ಸಾಕಷ್ಟು ಕೆಲಸದ ಸಮಯವನ್ನು ಕಳೆದುಕೊಳ್ಳಬೇಕಾಗುತ್ತದೆ. ೨೦೦೦ ದ ವರ್ಷದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಅರ್ಧದಷ್ಟು ಜನರು ಆನೆಕಾಲು ಕಾಯಿಲೆಗೆ ತುತ್ತಾಗುವ ಅಪಾಯವಿದೆ. ಪುರುಷರು ಮತ್ತು ಮಹಿಳೆಯರು ಈ ಕಾಯಿಲೆಯನ್ನು ಹೊಂದಬಹುದು. ಆದರೆ ಈ ಹಿಂದೆ ಮಹಿಳೆಯರು ಸಾಮಾನ್ಯ ರೀತಿಯಲ್ಲಿ ಈ ಕಾಯಿಲೆಗೆ ಚಿಕಿತ್ಸೆಯನ್ನು ಪಡೆಯಲು ಅಡ್ಡಿಆತಂತಕಗಳಿದ್ದವು. ಆನೆಕಾಲು ಕಅಯಿಲೆಯನ್ನು ಕಡಿಮೆ ಮಾಡಲು ೧೯೫೫ ರಲ್ಲಿ ಭಾರತ ಸರ್ಕಾರ ರಾಷ್ಟ್ರೀಯ ಫಿಲೇರಿಯಾ ನಿಯಂತ್ರಣ ಕಾರ್ಯಕ್ರಮವನ್ನು ಸ್ಥಾಪಿಸಿತು. ೧೯೯೭ ರಲ್ಲಿ ಭಾರತವು ೨೦೨೦ ರ ವೇಳೆಗೆ ಆನೆಕಾಲು ಕಾಯಿಲೆಯನ್ನು ತೊಡೆದುಹಾಕುವ ವಿಶ್ವ ಆರೋಗ್ಯ ಅಸೆಂಬ್ಲಿಯ ನಿರ್ಣಯವನ್ನು ಸ್ವೀಕರಿಸಿತು. ಆನೆಕಾಲು ಕಾಯಿಲೆಯನ್ನುನಿರ್ಮೂಲನೆ ಮಾಡುವಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ೨೦೧೫ ರಲ್ಲಿ ಭಾರತ ಸರ್ಕಾರವು ಹತಿಪಾನ್ ಮುಕ್ತ ಭಾರತ್ (ಫಿಲೇರಿಯಾ ಮುಕ್ತ ಭಾರತ) ಎಂಬ ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿತು. ಆಯುರ್ವೇದ ಪಠ್ಯ ಸುಶ್ರುತ ಸಂಹಿತೆಯಲ್ಲಿ ದುಗ್ಧರಸ ಆನೆಕಾಲು ಕಾಯಿಲೆಯನ್ನುನ್ನು ವಿವರಿಸಲಾಗಿದೆ. === ಎಕಿನೊಕೊಕೊಸಿಸ್ === ಎಕಿನೋಸಿಸ್ ಲಾಡಿಹುಳಗಳಿಂದಾಗಿ ಬರುವ ಒಂದು ಪರಾವಲಂಬಿ ಕಾಯಿಲೆಯಾಗಿದೆ. === ಸಿಸ್ಟಿಸರ್ಕೊಸಿಸ್ === ಸಿಸ್ಟಿಸರ್ಕೊಸಿಸ್ ಮತ್ತು ಟೆನಿಯಾಸಿಸ್ ಎರಡೂ ಲಾಡಿಹುಳಗಳಿಂದಾಗಿ ಬರುವ ಪರಾವಲಂಬಿ ಕಾಯಿಲೆಗಳಾಗಿವೆ. === ನಾರುಹುಣ್ಣಿನ ಹುಳು (ಗಿನಿಯಾ ವರ್ಮ್) -ಈಗ ನಾಶ ಮಾಡಲಾಗಿದೆ === ನಾರುಹುಣ್ಣಿನ ಹುಳು (ಗಿನಿಯಾ ವರ್ಮ್) ಕಾಯಿಲೆಯು ಭಾರತದಲ್ಲಿ ಉಪೇಕ್ಷಿತ ಉಷ್ಣವಲಯದ ಕಾಯಿಲೆಯಾಗಿತ್ತು. ಅದೃಷ್ಟವಶಾತ್ ಭಾರತದಲ್ಲಿ ಜನರು ಈ ರೋಗವನ್ನು ೨೦೦೦ ನೆಯ ಇಸವಿಯಲ್ಲಿ ನಿರ್ಮೂಲನೆ ಮಾಡಿದರು. ೨೦೦೩ರ ನಂತರ ಈ ಕಾಯಿಲೆಯು ಭಾರತದಲ್ಲಿ ಕಂಡುಬಂದಿಲ್ಲ. === ಆಹಾರದ ಮೂಲಕ ಹರಡುವ ಟ್ರೆಮಾಟೋಡ್ ಸೋಂಕು === ಆಹಾರದ ಮೂಲಕ ಹರಡುವ ಟ್ರೆಮಾಟೋಡ್ ಸೋಂಕು ಭಾರತದಲ್ಲಿ ಸಮಸ್ಯೆಯಲ್ಲ. ೧೯೬೯ ರಿಂದ ೨೦೧೨ ರವರೆಗೆ ಭಾರತದಲ್ಲಿ ಕೆಲವೇ ಜನರು ಆಹಾರದ ಮೂಲಕ ಹರಡುವ ಟ್ರೆಮಾಟೋಡ್ ಸೋಂಕಿಗೆ ತುತ್ತಾದ ಬಗ್ಗೆ ಕೆಲವೇ ವರದಿಗಳು ಬಂದಿದ್ದವು. ಈ ಸೋಂಕು ಭಾರತದಲ್ಲಿ ಹಸುಗಳು, ಎಮ್ಮೆ, ಕುರಿ ಮತ್ತು ಮೇಕೆಗಳಲ್ಲಿ ಕಂಡುಬಂದಿವೆ. ೨೦೧೨ರಲ್ಲಿ ಮಾನವರಲ್ಲಿ ಎರಡು ಸೋಂಕು ಕಂಡುಬಂದ ಬಗ್ಗೆ ವರದಿಯಾಗಿತ್ತು. === ಒಂಕೊಸೆರ್ಸಿಯಾಸಿಸ್ === ಒಂಕೊಸೆರ್ಸಿಯಾಸಿಸ್ (ನದಿ ಕುರುಡುತನ) ಭಾರತದಲ್ಲಿ ಸಮಸ್ಯೆಯಲ್ಲ. ಒಂದು ವಿಶಿಷ್ಟ ಪ್ರಕರಣದಲ್ಲಿ ಭಾರತದಲ್ಲಿ ಒಂಕೊಸೆರ್ಸಿಯಾಸಿಸ್ ಕಂಡುಬಂದಿದೆ. === ಸ್ಕಿಸ್ಟೊಸೋಮಿಯಾಸಿಸ್ === ಸ್ಕಿಸ್ಟೊಸೋಮಿಯಾಸಿಸ್ ಭಾರತದಲ್ಲಿ ಸಮಸ್ಯೆಯಲ್ಲ. ಭಾರತವು ಸ್ಕಿಸ್ಟೊಸೋಮಿಯಾಸಿಸ್ ಬಗ್ಗೆ ವರದಿಗಳಾಗಿಲ್ಲದಿದ್ದರೂ ರೋಗವು ಅಸ್ತಿತ್ವದಲ್ಲಿರಬಹುದು ಮತ್ತು ವರದಿಯಾಗದಿರಬಹುದು ಎಂದು ೨೦೧೫ ರ ವರದಿಯೊಂದು ವಿವರಿಸಿದೆ. ೧೯೫೨ ರಲ್ಲಿ ಭಾರತೀಯ ಹಳ್ಳಿಯೊಂದಲ್ಲಿದ್ದ ಕಾಯಿಲೆಯನ್ನು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ತನಿಖಾಧಿಕಾರಿಗಳು ಚಿಕಿತ್ಸೆ ನೀಡಿದರು ಹಾಗೂ ಅದರ ಮೂಲವನ್ನು ಗುರುತಿಸಲು ಪ್ರಯತ್ನಿಸಿದರು. == ವೈರಸ್‍ಗಳು == === ಡೆಂಗ್ಯೂ ಜ್ವರ ಮತ್ತು ಚಿಕೂನ್‌ಗುನ್ಯಾ ಜ್ವರ === ವಿಶ್ವ ಆರೋಗ್ಯ ಸಂಸ್ಥೆಯು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಜ್ವರಗಳನ್ನು ಒಂದೇ ಗುಂಪಿಗೆ ಸೇರಿಸಿದೆ. ಆದರೆ ಇವು ಪ್ರತ್ಯೇಕ ಪರಿಸ್ಥಿತಿಗಳು. ಚಿಕೂನ್‌ಗುನ್ಯಾ ಭಾರತದಲ್ಲಿ ಅಷ್ಟೊ ದೊಡ್ಡ ಸಮಸ್ಯೆಯಲ್ಲ. ೧೯೭೩ ಕ್ಕಿಂತ ಮೊದಲು ಭಾರತದಲ್ಲಿ ಚಿಕೂನ್‌ಗುನ್ಯಾ ಇತ್ತು ಹಾಗೂ ನಂತರ ಅದನ್ನು ನಿರ್ಮೂಲನೆ ಮಾಡಲಾಯಿತು. ೨೦೦೫ ರಲ್ಲಿ ಭಾರತದಲ್ಲಿ ಇದು ಮತ್ತೆ ತಲೆದೊರಿತು ನಂತರ ಭಾರತದಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚುತ್ತಿವೆ. === ರೇಬೀಸ್ === ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ರೇಬೀಸ್ ಒಂದು ದೊಡ್ಡ ಸಮಸ್ಯೆಯಾಗಿದೆ. ರೇಬೀಸ್ ಹೆಚ್ಚಾಗಿ ನಾಯಿ ಕಚ್ಚುವಿಕೆಯಿಂದ ಬರುತ್ತದೆ. ಭಾರತದಲ್ಲಿ ಅನೇಕ ಬೀದಿನಾಯಿಗಳಿವೆ ಮತ್ತು ಅನೇಕ ಜನರು ಅವುಗಳಿಂದ ಕಚ್ಚಲ್ಪಡುತ್ತಾರೆ. ಹೀಗೆ ಕಚ್ಚಿಸಿಕೊಂಡ ವ್ಯಕ್ತಿಗೆ ರೇಬೀಸ್‌ಗೆ ಚಿಕಿತ್ಸೆ ಅಗತ್ಯವಿದೆಯೇ ಎಂದು ನಿರ್ಧರಿಸಲು, ವೈದ್ಯರು ಈ ಪ್ರದೇಶದಲ್ಲಿನ ಪ್ರಾಣಿಗಳಲ್ಲಿ ರೇಬೀಸ್ ಇರುವ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಭಾರತದಲ್ಲಿ ಕಚ್ಚಿಸಿಕೊಂಡ ಸುಮಾರು ಶೇಕಡ ೨ ರಷ್ಟು ಜನರಿಗೆ ರೇಬೀಸ್ ಲಸಿಕೆ ಸಿಗುತ್ತದೆ. ಭಾರತದಲ್ಲಿ ರೇಬೀಸ್ ಬಂದ ವ್ಯಕ್ತಿಗಳಲ್ಲಿ ಸಾವಿನ ಪ್ರಮಾಣ ಸುಮಾರು ಶೇಕಡ ೧೦೦ ರಷ್ಟಿದೆ.. ಅಂದರೆ ರೇಬಿಸ್ ಬಂದ ವ್ಯಕ್ತಿ ಸಾಯುವುದು ಬಹುತೇಕ ಶತಃಸಿದ್ಧ. == ಬ್ಯಾಕ್ಟೀರಿಯಾ == === ಕುಷ್ಠರೋಗ === ೧೯೮೩ ರಿಂದ ೨೦೦೫ ರ ವರೆಗೆ ಭಾರತವು ಕುಷ್ಠರೋಗವನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ತೊಡೆದುಹಾಕಲು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿತು. ಈ ಕಾರ್ಯಕ್ರಮಗಳು ಭಾರತದಲ್ಲಿ ಕುಷ್ಠರೋಗ ಪೀಡಿತ ಜನರ ಸಂಖ್ಯೆಯನ್ನು ೧೦,೦೦೦ ದಲ್ಲಿ ೫೮ ರಿಂದ ೧ ಕ್ಕೆ ಇಳಿಸಿದರೂ, ಕುಷ್ಠರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಲಾಗಲಿಲ್ಲ. ಈ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಲು ಮುಂದಿನ ದಿನಗಳಲ್ಲಿ ಸಾಧ್ಯವಿದೆ. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮವು ಈ ಕಾಯಿಲೆಯನ್ನು ಕೊನೆಗೊಳಿಸುವ ಸರ್ಕಾರದ ಯೋಜನೆಯಾಗಿದೆ. ಹೊಸದಾಗಿ ಲಭ್ಯವಿರುವ ತಂತ್ರಜ್ಞಾನವು ಭಾರತದಲ್ಲಿ ಕುಷ್ಠರೋಗವನ್ನು ಪತ್ತೆ ಹಚ್ಚುವುದನ್ನು ಮತ್ತು ಚಿಕಿತ್ಸೆ ನೀಡುವುದನ್ನು ಹೇಗೆ ಸುಲಭಗೊಳಿಸಬಹುದು ಎಂದು ೨೦೧೯ ರ ವರದಿಯೊಂದು ವಿವರಿಸಿದೆ. === ರವೆಗಣ್ಣು (ಟ್ರಾಕೋಮಾ) === ಭಾರತವು ರವೆಗಣ್ಣಿನಿಂದ ಮುಕ್ತವಾಗಿದೆ ಎಂದು ಡಿಸೆಂಬರ್ ೨೦೧೭ ರಲ್ಲಿ ಭಾರತದ ಆರೋಗ್ಯ ಸಚಿವರು ಘೋಷಿಸಿದರು. ೨೦೧೧ ರ ವರದಿಯೊಂದರ ಪ್ರಕಾರ ಭಾರತವು ೧೦ ವರ್ಷಗಳಲ್ಲಿ ಟ್ರಾಕೋಮಾವನ್ನು ಸಂಪೂರ್ಣವಾಗಿ ನಿವಾರಿಸಬಹುದೆಂದು ಊಹಿಸಲಾಗಿದೆ. === ಯಾವ್ಸ್ (ಚರ್ಮದ ಅಂಟುರೋಗ) === ಭಾರತ ಸರ್ಕಾರವು ೧೯೫೦ ರ ದಶಕದಲ್ಲಿ ಯಾವ್ಸ್ ಅನ್ನು ತೊಡೆದುಹಾಕಲು ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಭಾರತವು ೧೯೯೬ ರಲ್ಲಿ ಯಾವ್ಸ್ ನಿರ್ಮೂಲನಾ ಕಾರ್ಯಕ್ರಮವನ್ನು ಪ್ರಾರಂಭಿಸಿತು ಮತ್ತು ಅದರ ಪ್ರಾರಂಭದಲ್ಲಿ ೭೩೫ ಪ್ರಕರಣಗಳನ್ನು ಗುರುತಿಸಿತು. ಈ ಕಾರ್ಯಕ್ರಮವು ರೋಗವನ್ನು ತೊಡೆದುಹಾಕಿದೆ ಎಂದು ೨೦೦೪ ರಲ್ಲಿ ಭಾರತ ಸರ್ಕಾರ ಘೋಷಿಸಿತು. ಯಾವ್ಸ್ ಹೋದಂತೆ ಕಂಡುಬಂದ ನಂತರವೂ, ಸರ್ಕಾರವು ೨೦೦೬ ರ ವರೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳ ಮೇಲ್ವಿಚಾರಣೆ ಮತ್ತು ಹುಡುಕಾಟವನ್ನು ಮುಂದುವರೆಸಿತು. ಅದನ್ನು ಮುಂದುವರಿಸಿ, ೨೦೧೧ ರ ತನಕ ಯಾವ್ಸ್ ಕಂಡುಬಂದ ವದಂತಿಗಳನ್ನು ತನಿಖೆ ಮಾಡುವುದನ್ನು ಮುಂದುವರೆಸಿತು. ಮೇ ೨೦೧೬ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಯಾವ್ಸ್ ಮುಕ್ತ ಎಂದು ಘೋಷಿಸಿತು. ಯಾವ್ಸ್ ನಮೂನೆಯ ಚರ್ಮರೋಗವು ಭಾರತಕ್ಕೆ ಸ್ಥಳೀಯವಾಗಿತ್ತು ಮತ್ತು ಅದನ್ನು ತೊಡೆದುಹಾಕಿದ ಮೊದಲ ದೇಶ ಭಾರತವಾಗಿದೆ. ಭಾರತದಲ್ಲಿನ ಈ ಯಶಸ್ಸು ಭಾರತವು ಬಳಸಿದ ವಿಧಾನಗಳನ್ನು ಬಳಸಿಕೊಂಡು ೨೦೨೦ ರ ಹೊತ್ತಿಗೆ ಯಾವ್ಸ್ ಅನ್ನು ತೊಡೆದುಹಾಕಲು ಪ್ರಯತ್ನಿಸಲು ಇತರ ದೇಶಗಳಿಗೆ ಉತ್ಸಾಹವನ್ನುಂಟುಮಾಡಿತು. === ಬುರುಲಿ ಹುಣ್ಣು === ಬುರುಲಿ ಹುಣ್ಣು ಭಾರತದಲ್ಲಿ ಸಮಸ್ಯೆಯಾಗಿಲ್ಲ. ೨೦೧೯ ರಲ್ಲಿ ವೈದ್ಯರು ಭಾರತದಲ್ಲಿ ಒಂದು ಬುರುಲಿ ಹುಣ್ಣು ಪ್ರಕರಣವನ್ನು ಗುರುತಿಸಿದರು. ಆದರೆ ರೋಗಿಯು ಆ ಕಾಯಿಲೆಯಿರುವ ನೈಜೀರಿಯಾ ಮೂಲದವರಾಗಿದ್ದರು. == ಶಿಲೀಂಧ್ರ == === ಮೈಸೆಟೋಮಾ === ಮೈಸೆಟೋಮಾ ಒಂದು ಚರ್ಮದ ಅಡಿಭಾಗದ ಸೋಂಕು. ಭಾರತದಲ್ಲಿ ಇದಕ್ಕೆ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾ ಕಾರಣವಾಗಿರಬಹುದು. ರಾಜಸ್ಥಾನದಲ್ಲಿ ಶಿಲೀಂಧ್ರ ಸಾಮಾನ್ಯವಾದ ಕಾರಣವಾಗಿದೆ. ಆದರೆ ಭಾರತದ ಬೇರೆಡೆಗಳಲ್ಲಿ ಬ್ಯಾಕ್ಟೀರಿಯಾ ಸಾಮಾನ್ಯವಾದ ಕಾರಣಾವಾಗಿದೆ. ಮಧ್ಯ ಭಾರತದಲ್ಲಿ ಮೈಸೆಟೋಮಾ ಸಾಮಾನ್ಯವಾಗಿದೆ ಎಂದು ಕೆಲವು ಆರೋಗ್ಯ ಸಮೀಕ್ಷೆಗಳು ತೋರಿಸಿವೆ. ಈ ಕಾಯಿಲೆಗೆ ಚಿಕಿತ್ಸೆ ನೀಡುವುದು ಸ್ವಲ್ಪ ಕಷ್ಟ. ಶಿಲೀಂಧ್ರದ ಚಿಕಿತ್ಸೆಯು ಬ್ಯಾಕ್ಟೀರಿಯಾದ ಮೇಲೆ ಕೆಲಸ ಮಾಡುವುದಿಲ್ಲ ಮತ್ತು ಬ್ಯಾಕ್ಟೀರಿಯಾದ ಚಿಕಿತ್ಸೆಯು ಶಿಲೀಂದ್ರದ ಮೇಲೆ ಕೆಲಸ ಮಾಡುವುದಿಲ್ಲ. ಕಾಯಿಲೆಗೆ ಬ್ಯಾಕ್ಟೀರಿಯಾವು ಕಾರಣವಾದಾಗ ಚಿಕಿತ್ಸೆಯ ಅವಧಿ ದೀರ್ಘವಾಗಿರುತ್ತದೆ. ೧೮೭೪ ರಲ್ಲಿ ಹೆನ್ರಿ ವಾಂಡಿಕೆ ಕಾರ್ಟರ್ ಎಂಬ ಬ್ರಿಟಿಷ್ ಶಸ್ತ್ರಚಿಕಿತ್ಸಜ್ಞರು ಆನ್ ಮೈಸೆಟೋಮಾ ಆರ್ ದ ಫಂಗಸ್ ಡಿಸೀಸ್ ಆಫ್ ಇಂಡಿಯಾ ಎಂಬ ಪುಸ್ತಕವನ್ನು ಬರೆದಿದ್ದರು. == ಇತರೆ == === ತುರಿಕೆ === ಭಾರತದಲ್ಲಿ ತುರಿಕೆಯ ಪ್ರಕರಣಗಳು ಶೇಕಡ ೧೩ ರಿಂದ ೫೯ ರಷ್ಟಿವೆ. ಈ ಸ್ಥಿತಿಯು ಭಾರತೀಯ ಜನರ ಕೆಲಸ, ವಿರಾಮ ಮತ್ತು ನಿದ್ರೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಬಹಳ ಕಟಿಮೆ ಸಂಶೋಧನೆ ಆಗಿದೆ. ವಿವಿಧ ಸಾಂಕ್ರಾಮಿಕ ಕಾಯಿಲೆಗಳ ಅಧ್ಯಯನಗಳು ಭಾರತದಲ್ಲಿ ವಿವಿಧ ಸಮಯ ಮತ್ತು ಸ್ಥಳಗಳಲ್ಲಿ ತುರಿಕೆ ಹೊಂದಿರುವ ಜನರ ಸಂಖ್ಯೆಯನ್ನು ವರದಿ ಮಾಡಿವೆ. ಚರ್ಮಕ್ಕೆ ಹಚ್ಚುವ ಪರ್ಮೆಥ್ರಿನ್ ಮತ್ತು ಮೌಖಿಕವಾಗಿ ತೆಗೆದುಕೊಳ್ಳುವ ಐವರ್ಮೆಕ್ಟಿನ್ ಎಂಬ ಔಷಧಿಗಳನ್ನು ಸಾಮಾನ್ಯವಾಗಿ ಭಾರತದಲ್ಲಿ ತುರಿಕೆಯ ಚಿಕಿತ್ಸೆಗಾಗಿ ಬಳಸುತ್ತಾರೆ. === ಹಾವು ಕಡಿತ === ಭಾರತದ ನಾಲ್ಕು ಪ್ರಮುಖ ವಿಷದ ಹಾವುಗಳು ಎಂದರೆ ಭಾರತೀಯ ನಾಗರ ಹಾವು, ಸಾಮಾನ್ಯ ಕಟ್ಟಿಗೆ ಹಾವು (ಕಾಮನ್ ಕ್ರೈಟ್), ಕೊಳಕು ಮಂಡಲ ಮತ್ತು ಗರಗಸ ಮಂಡಲ. ಈ ನಾಲ್ಕಲ್ಲದೆ ಸರಿಯಾದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವಷ್ಟು ಕಚ್ಚುವ ಹಲವಾರು ಹಾವುಗಳಿವೆ. ೨೦೧೮ ರ ಮೇನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಾವು ಕಡಿತಕ್ಕೆ ಪ್ರತಿಕ್ರಿಯಿಸುವುದು ಜಾಗತಿಕ ಆರೋಗ್ಯ ಆದ್ಯತೆಯಾಗಿದೆ ಎಂದು ಘೋಷಿಸಿತು. ಭಾರತದ ಕೆಲವು ಪ್ರದೇಶಗಳಲ್ಲಿ ಪರಂಪರಾಗತ ಔಷಧಿಗಳನ್ನು ಹಾವುಕಡಿತಕ್ಕೆ ಚಿಕಿತ್ಸೆಗಾಗಿ ಬಳಸುತ್ತಾರೆ. ಹಾವಿನ ವಿಷಕ್ಕೆ ವಿಷವಿರೋಧಕ ಅಥವಾ ಔಷಧಿ ತಯಾರಿಸುವುದು ಒಂದು ಸವಾಲಾಗಿದೆ. ಏಕೆಂದರೆ ವಿಭಿನ್ನ ಹಾವುಗಳಿಗೆ ಚಿಕಿತ್ಸೆ ನೀಡಲು ವಿಭಿನ್ನ ವಿಷವಿರೋಧಕದ ಅಗತ್ಯವಿರುತ್ತದೆ ಮತ್ತು ಭಾರತದಲ್ಲಿ ಅನೇಕ ರೀತಿಯ ಹಾವುಗಳಿವೆ. ಶೇಕಡ ೯೭ ರಷ್ಟು ಹಾವು ಕಡಿತಗಳು ಗ್ರಾಮೀಣ ಪ್ರದೇಶದಲ್ಲಿ ಸಂಭವಿಸುತ್ತದೆ. ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶೇಷ ಸ್ಥಾನವಿದೆ. ಈ ಕಾರಣದಿಂದಾಗಿ ಅನೇಕ ಜನರು ಹಾವಿನ ಕಡಿತದಿಂದಾದ ತಮ್ಮ ಅನಾರೋಗ್ಯದ ಚಿಕಿತ್ಸೆಯನ್ನು ಇತರೆ ಕಾಯಿಲೆಗಳಿಗಿಂತ ಕಡಿಮೆ ಮಹತ್ವ ನೀಡುತ್ತಾರೆ. ೨೦೧೦ ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಹಾವಿನ ಕಡಿತದ ಬಗ್ಗೆ ಕಡಿಮೆ ಮಾಹಿತಿ ಇದೆ ಮತ್ತು ಸಾಕಷ್ಟು ಚಿಕಿತ್ಸೆಯು ಲಭ್ಯವಿಲ್ಲ ಎಂದು ಕಂಡುಬಂದಿದೆ. ೧೯೫೪ ರ ಒಂದು ಅಧ್ಯಯನವು ೧೯೪೦ ರಿಂದ ಹಾವು ಕಡಿತವನ್ನು ಅಧ್ಯಯನ ಮಾಡಿದೆ. ಈ ಅಧ್ಯಯನದ ಪ್ರಕಾರ ಭಾರತದಲ್ಲಿ ವರ್ಷಕ್ಕೆ ೩ ರಿಂದ ೪ ಲಕ್ಷ ಹಾವುಕಡಿತ ಆಗುತ್ತದೆ ಹಾಗೂ ಅದರಲ್ಲಿ ಸುಮಾರು ಶೇಕಡ 10 ರಷ್ಟು ಮಾರಣಾಂತಿಕವಾಗಿರುತ್ತದೆ. ಕೆಲವೊಮ್ಮೆ ಸಂಪೂರ್ಣ ರಕ್ತ ಹೆಪ್ಪುಗಟ್ಟುವಿಕೆಯ ಪರೀಕ್ಷೆ ಮತ್ತು ವಿಷ ಪತ್ತೆಯ ಕಿಟ್ ದೊರೆಯುವುದಿಲ್ಲ. == ಸಾಂಕ್ರಾಮಿಕ ರೋಗಶಾಸ್ತ್ರ == ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ವಿಶ್ವದ ಅರ್ಧದಷ್ಟು ಕಾಲಾ ಅಜ಼ರ್, ದುಗ್ಧರಸ ಆನೆಕಾಲು ಮತ್ತು ಕುಷ್ಠರೋಗ ಪ್ರಕರಣಗಳಿವೆ. ಈ ಪ್ರದೇಶದಲ್ಲಿ ಪ್ರಪಂಚದ ಮೂರನೇ ಒಂದರಷ್ಟು ರೇಬೀಸ್ ಸಾವುಗಳು ಕಂಡು ಬಂದಿವೆ. ಪ್ರಪಂಚದ ಕಾಲು ಭಾಗದಷ್ಟು ಕರುಳಿನ ಹೆಲ್ಮಿಂತ್ ಸೋಂಕು ಇಲ್ಲಿದೆ. ೨೦೧೪ ರ ಹೊತ್ತಿಗೆ ಡೆಂಗ್ಯೂ ಮತ್ತು ಜಪಾನೀ ಎನ್ಸೆಫಾಲಿಟಿಸ್ ಬಗ್ಗೆ ಪೂರ್ತಿ ಮಾಹಿತಿ ಇರಲಿಲ್ಲ, ಆದರೆ ಈ ರೋಗಗಳು ಭಾರತದಲ್ಲಿಯೂ ಸಹ ಒಂದು ದೊಡ್ಡ ಸಮಸ್ಯೆಯಾಗಿವೆ. ೨೦೧೭ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದ ೧೭ ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳಲ್ಲಿ ೬ ಕಾಯಿಲೆಗಳು ಭಾರತದಲ್ಲಿ ಸಾಮಾನ್ಯವಾಗಿವೆ. ಆ 6 ರೋಗಗಳು ಯಾವುವೆಂದರೆ ದುಗ್ಧರಸ ಆನೆಕಾಲು, ಕಾಲಾ-ಅಜ಼ರ್ (ವಿಸ್ಕರಲ್ ಲೀಶ್ಮೇನಿಯಾಸಿಸ್ ), ಲೆಪ್ಟೊಸ್ಪೈರೋಸಿಸ್, ರೇಬೀಸ್, ಮಣ್ಣಿನ ಮೂಲಕ ಹರಡುವ ಹೆಲ್ಮಿಂಥಿಯಾಸಿಸ್ ಮತ್ತು ಡೆಂಗ್ಯೂ ಜ್ವರ . ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ ಎಂಬುದು ನಿಯಮಿತವಾಗಿ ನವೀಕರಿಸಿದ ವರದಿಯಾಗಿದ್ದು, ಇದು ವಿಶ್ವದ ಪ್ರತಿಯೊಂದು ಪ್ರಮುಖ ರೋಗವು ಆ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತದೆ. ಈ ವರದಿಯು ಆಶ್ಚರ್ಯಕರ ಸಮಸ್ಯೆಗಳನ್ನು ಗುರುತಿಸುತ್ತದೆ. ೨೦೧೬ ರ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನದಲ್ಲಿ ಕಂಡುಬಂದ ಒಂದು ಆಶ್ಚರ್ಯಕರ ಸಂಗತಿಯೆಂದರೆ, ಭಾರತವು ೧೬ ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳಲ್ಲಿ ೧೧ ಕಾಯಿಲೆಗಳಲ್ಲಿ ಅತಿ ಹೆಚ್ಚು ಮತ್ತು ಅತಿ ಕೆಟ್ಟ ಪ್ರಕರಣಗಳನ್ನು ಹೊಂದಿದೆ. == ತಡೆಗಟ್ಟುವಿಕೆ == ಸಾಧ್ಯವಾದಷ್ಟು ಈ ಕಾಯಿಲೆಗಳನ್ನು ನಿರ್ಮೂಲನೆ ಮಾಡುವುದು ಒಂದು ಗುರಿಯಾಗಿದೆ. ಭಾರತದಲ್ಲಿ ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳನ್ನು ಕಡಿಮೆ ಮಾಡುವ ಮತ್ತು ನಿರ್ಮೂಲನೆ ಮಾಡುವ ಉದ್ದೇಶದಿಂದ ಆರೋಗ್ಯ ರಕ್ಷಣೆಯಲ್ಲಿ ಆರ್ಥಿಕ ಹೂಡಿಕೆ ಮಾಡುವಲ್ಲಿ ಭಾರತ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಹಕರಿಸುತ್ತದೆ. ೨೦೦೫ ರಲ್ಲಿ, ಭಾರತೀಯ ಆರೋಗ್ಯ ಸಚಿವಾಲಯ, ಬಾಂಗ್ಲಾದೇಶ ಆರೋಗ್ಯ ಸಚಿವಾಲಯ ಮತ್ತು ನೇಪಾಳಿ ಆರೋಗ್ಯ ಸಚಿವಾಲಯಗಳು ೨೦೧೫ ರ ವೇಳೆಗೆ ತಮ್ಮ ತಮ್ಮ ದೇಶಗಳಲ್ಲಿ ಕಾಲಾ-ಅಜ಼ರ್ ಅನ್ನು ತೊಡೆದುಹಾಕಲು ಒಡಂಬಡಿಕೆಯೊಂದನ್ನು ಮಾಡಿಕೊಂಡಿವೆ. ಭಾರತದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು ಕುಷ್ಠರೋಗದ ಪ್ರಮಾಣವನ್ನು ಕಡಿಮೆ ಮಾಡುತ್ತಿವೆ ಆದರೆ ಈ ಪ್ರದೇಶದಿಂದ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗುತ್ತಿಲ್ಲ ಎಂದು ೨೦೧೫ ರ ಅಧ್ಯಯನವೊಂದು ವರದಿ ಮಾಡಿದೆ. ೨೦೧೭ ರಲ್ಲಿ ಭಾರತ ಸರ್ಕಾರವು ೧೦ ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳನ್ನು ನಿರ್ಮೂಲನೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಯಲ್ಲಿ ಭಾಗವಹಿಸಲು ಪ್ರಾರಂಭಿಸಿತು. ಬಡತನವನ್ನು ಕಡಿಮೆ ಮಾಡುವುದು, ನೈರ್ಮಲ್ಯವನ್ನು ಪ್ರೋತ್ಸಾಹಿಸುವುದು ಮತ್ತು ಸಾರ್ವಜನಿಕ ಆರೋಗ್ಯ ಶಿಕ್ಷಣವನ್ನು ನೀಡುವುದು ಸರ್ಕಾರದ ಕಾರ್ಯತಂತ್ರವಾಗಿದೆ. == ಸಮಾಜ ಮತ್ತು ಸಂಸ್ಕೃತಿ == ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳು ಬಡತನದ ಕಾಯಿಲೆಗಳಾಗಿವೆ ಮತ್ತು ಸಮಾಜದಲ್ಲಿ ಬಡತನದ ಪ್ರಮಾಣ ಕಡಿಮೆ ಮಾಡುವುದರಿಂದ ಅವುಗಳನ್ನು ಕಡಿಮೆ ಮಾಡಬಹುದು. ಕೆಲವು ಜನರು ಕಾಯಿಲೆಯೆಂದರೆ ಮುಜುಗರಕ್ಕೊಳಗಾಗುತ್ತಾರೆ. ಆದರೆ ಕಾಯಿಲೆ ಬರುವುದು ಯಾರೊಬ್ಬರ ತಪ್ಪಲ್ಲ. ರೋಗಗಳ ಬಗ್ಗೆ ಕಲಿಸಲು ಭಾರತ ಸರ್ಕಾರವು ಹಲವು ಆರೋಗ್ಯ ಅಭಿಯಾನಗಳನ್ನು ಆಯೋಜಿಸಿದೆ. ಇದರಿಂದಾಗಿ ಜನರು ಅಗತ್ಯವಿರುವಾಗ ವೈದ್ಯಕೀಯ ಸಹಾಯಕ್ಕಾಗಿ ಬರುವಂತಾಗುತ್ತದೆ. == ಉಲ್ಲೇಖಗಳು ==